11 September 2008

ತುರ್ತುಪರಿಸ್ಥಿತಿ, ನನ್ನ ನೆನಪು

ನೆನಪಿದೆಯಾ? ಜೂನ್ 26. ನೆನಪಾಯಿತಾ? ನನ್ನ ನೆನಪು 32 ವರ್ಷಗಳಷ್ಟು ಹಿಂದೆ ಹಿಂದೆ ಓಡುತ್ತಿದೆ. ಅದೇಕೋ ಮಾಧ್ಯಮದ ಬಹುಪಾಲು ಜನ ತುರ್ತು ಪರಿಸ್ಥಿತಿಯನ್ನು ಮರೆತೇಬಿಟ್ಟಿದ್ದಾರೆ.
A date with 26 Juneಅಂದು 26 ಜೂನ್ 1975ರ ಮುಂಜಾನೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಆಕಾಶವಾಣಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಆಗ ದೂರದರ್ಶನ ಇರಲಿಲ್ಲ.

"ಕೆಲವರು ಸೈನಿಕರನ್ನು ಸರ್ಕಾರದ ವಿರುದ್ಧ ದಂಗೆ ಏಳುವಂತೆ ಕರೆ ಕೊಟ್ಟಿದ್ದಾರೆ, ವಿರೋಧಪಕ್ಷಗಳು ಅರಾಜಕತೆಯನ್ನು ಉಂಟುಮಾಡಲು ಯತ್ನಿಸುತ್ತಿವೆ", ಇತ್ಯಾದಿ, ಇತ್ಯಾದಿ. ಜನ ನಂಬುತ್ತಾರೆ ಎಂದುಕೊಂಡಿದ್ದರು, ಇಂದಿರಾಜಿ. ಅವರು ಹಾಗೆ ಅಟ್ಯಾಕ್ ಮಾಡಿದ್ದು ಜಯಪ್ರಕಾಶ ನಾರಾಯಣರನ್ನು. ರಾತ್ರೋರಾತ್ರಿ ವಿರೋಧಪಕ್ಷದವರನ್ನು, ಅಷ್ಟೇಕೆ ಎಲ್ಲ ಬಗೆಯ ವಿರೋಧಿಗಳನ್ನು ಬಂಧಿಸಲಾಯಿತು.ನಂತರದ್ದು ಇತಿಹಾಸ.

ತುರ್ತುಪರಿಸ್ಥಿತಿಯ ಅಕ್ರಮ, ಅನ್ಯಾಯ, ಸ್ವೈರಾಚಾರಗಳ ಬಗ್ಗೆ ಉದ್ದುದ್ದ ಬರೆಯಬೇಕಿಲ್ಲ. ನೋವಾಗುವುದೇ ಬೇರೆ ಬೇರೆ ಕಾರಣಗಳಿಗೆ.

ಇಡೀ ದೇಶದಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ ಎಮ್.ಪಿ., ಒಬ್ಬನೇ ಒಬ್ಬ ಎಮ್.ಎಲ್.ಎ. ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲಿಲ್ಲ (ಪ್ರಾಯಶಃ ಇಂದಿಗೂ ಕಾಂಗ್ರೆಸ್ ಪಕ್ಷದ ಗುಣಲಕ್ಷಣದಲ್ಲಿ ಬದಲಾವಣೆಯಿಲ್ಲ.). ವಿರೋಧ ಪಕ್ಷದವರನ್ನು ಬಿಡಿ, ಎಲ್ಲಾ ಜೈಲಿನಲ್ಲಿದ್ದರು. ಸ್ವಾತಂತ್ರ್ಯ ತಂದುಕೊಟ್ಟೆವು, ಎಂದು ಇಂದಿಗೂ ಹೇಳಿಕೊಳ್ಳುವ, ಮಹಾತ್ಮಾ ಗಾಂಧೀಜಿಯವರ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರು, ಶಾಸಕರು ಮಾಡಿದ್ದು ಹೀಗೆ.

ಕೆಲವು ಪತ್ರಿಕೆಗಳು, ಇಂದಿರಾ ಬಗ್ಗಿ ಎಂದದ್ದಕ್ಕೆ ಅಡ್ಡಡ್ಡ ಮಲಗಿಯೇ ಬಿಟ್ಟವು. ನಮ್ಮ ಮಹಾನ್ ಸಾಹಿತಿಗಳು ಸಿನಿಮಾ ತೆಗೆಯಲು, ಮಲೆನಾಡಿನಲ್ಲಿ ಮೀನು ಹಿಡಿಯಲು, ಯಾರಿಗೂ ಅರ್ಥವಾಗದ ಕವಿತೆಗಳಲ್ಲಿ ಗೂಢ ಸಂಕೇತಗಳನ್ನು ತುಂಬುವಲ್ಲಿ ಮರೆಯಾಗಿಹೋದರು. ಅಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪ್ರತಿಭಟಿಸಿದವರಾರು, ಜೈಲುಗಳಿಗೆ ಹೋದವರಾರು ಎನ್ನುವುದನ್ನು ನೆನಪು ಮಾಡಿಕೊಂಡರೆ ಬೇಸರವಾಗುತ್ತದೆ, ನೋವಾಗುತ್ತದೆ.

ಇಂದು ಸಹಾ ಮೇಲ್ನೋಟಕ್ಕೆ ಕಾಣುವಷ್ಟು ಪರಿಸ್ಥಿತಿ ಆಶಾದಾಯಕವಾಗಿಲ್ಲ. ಯುವಜನಾಂಗ ವಿದೇಶೀ ಕಂಪನಿಗಳಲ್ಲಿ ಕೆಲಸ ಮಾಡುತ್ತಾ, ಯಾವುದಕ್ಕೂ ವೇಳೆಯಿಲ್ಲದೆ ಆತ್ಮರತಿಯಲ್ಲಿ ಮುಳುಗಿದೆ. ದೇಶದ ಬಗ್ಗೆ, ಸ್ವಾತಂತ್ರ್ಯದ ಮಹತ್ವದ ಬಗ್ಗೆ ಕಳಕಳಿ ತೋರಲು ಯಾರಿಗೂ ಪುರುಸೊತ್ತು ಇಲ್ಲ. ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ನಮ್ಮ ಮೇಲೆ ಹೇರಿದರೆ, ಪ್ರತಿಭಟನೆಯೇ ಇರುವುದಿಲ್ಲವೇನೋ ಎಂಬ ಭಯವಿದೆ.

ನಾವು ಚಿಕ್ಕವರಾಗಿದ್ದಾಗ ನಗೆಹನಿಯೊಂದು ಜನಪ್ರಿಯವಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿ, ಇಂಗ್ಲೆಂಡ್ ಮತ್ತು ರಷ್ಯಾ ದೇಶಗಳಿಗೆ ಸೇರಿದ ಮೂರು ನಾಯಿಗಳು ಒಂದೆಡೆ ಸೇರಿದ್ದವಂತೆ. ಇಂಗ್ಲೆಂಡಿನ ನಾಯಿ, ತನಗೆ ತಿನ್ನಲು ಬ್ರೆಡ್ಡೇ ಸಿಕ್ಕುತ್ತಿಲ್ಲ ಎಂದಿತಂತೆ. ಜರ್ಮನಿಯ ನಾಯಿ ಸಹ ತಾನು ಸಹ ಬ್ರೆಡ್ ತಿಂದು ಬಹಳ ದಿನವಾಯಿತೆಂದು ದುಃಖ ತೋಡಿಕೊಂಡಿತಂತೆ. ರಷ್ಯಾದ ನಾಯಿ ನಿಧಾನವಾಗಿ ತನಗೆ ಬ್ರೆಡ್ಡೇನೋ ಸಿಕ್ಕುತ್ತಿದೆ. ಆದರೆ ಬೊಗಳುವ ಹಾಗೇ ಇಲ್ಲ, ಎಂದಿತಂತೆ.

ತುರ್ತು ಪರಿಸ್ಥಿತಿಯಲ್ಲಿ ನಾವು, "ಭಾರತದ ನಾಯಿಗೆ ಈ ಕಡೆ ಬ್ರೆಡ್ಡೂ ಇಲ್ಲ, ಬೊಗಳುವ ಹಾಗೂ ಇಲ್ಲ", ಎಂದು ನಗುತ್ತಿದ್ದೆವು.

'ನೀವು ರಾಷ್ಟ್ರೀಯರೋ, ಭಾರತೀಯರೋ ?'ನನ್ನನ್ನು ಮತ್ತು ನನ್ನ ಜೊತೆ ಬಂಧಿತರಾದ ನನ್ನ ಗೆಳೆಯರನ್ನು ಸ್ಟೇಷನ್ನಿನಲ್ಲಿ ಪೊಲೀಸರು ಹೀಗೆ ಪ್ರಶ್ನಿಸಿದಾಗ, ನಾವು ಅಕ್ಷರಶಃ ಸ್ಥಂಭೀಭೂತರಾದೆವು. ಏನು ಹೇಳಬೇಕೆಂದೇ ತಿಳಿಯಲಿಲ್ಲ.

ಪೊಲೀಸರು ಬಂಧಿತರ ವಿವರಗಳನ್ನು ಪ್ರಿಸನರ್ಸ್ ಸರ್ಚ್ ರಿಜಿಸ್ಟರಿನಲ್ಲಿ ಬರೆದುಕೊಳ್ಳುತ್ತಾರೆ. ನಂತರ ತಿಳಿಯಿತು. ನಾವು "ರಾಷ್ಟ್ರೀಯ" ಸ್ವಯಂಸೇವಕ ಸಂಘಕ್ಕೆ ಸೇರಿದವರೋ, "ಭಾರತೀಯ" ಜನಸಂಘಕ್ಕೆ ಸೇರಿದವರೋ ತಿಳಿಯುವುದು ಪೊಲೀಸರ ಉದ್ದೇಶವಾಗಿತ್ತು. ನಮಗೆಲ್ಲಾ ತುಂಬಾ ನಗು ಬಂತು.

ಏನೇ ಇರಲಿ, ಸ್ವಾತಂತ್ರ್ಯದ ಮೂಲತತ್ವಗಳಲ್ಲಿ ನಮ್ಮ ಜನರಿಗೆ ಇವತ್ತೂ ಸಹ ಪ್ರೀತಿ, ಗೌರವ ಹುಟ್ಟಿಸಬೇಕಿದೆ.


No comments: